Header Ads Widget

ಮೂಡುಬೆಳ್ಳೆ ಕಟ್ಟಿoಗೇರಿ 1 ನೇ ವಾರ್ಡ್ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರ ಸಭೆ..!!


ಮೂಡುಬೆಳ್ಳೆ-   ಎಪ್ರಿಲ್ : 02: ಪ್ರೈಮ್ ಟಿವಿ ನ್ಯೂಸ್- ಕಾಪು ವಿಧಾನ ಸಭಾ ಕ್ಷೇತ್ರದ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮಸ್ಥರು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿಟ್ಟಿನಲ್ಲಿ  ಕಟ್ಟಿಂಗೇರಿ ಅಂಗನವಾಡಿ ಸಮೀಪ ಬೃಹತ್ ಸಭೆ ನಡೆಸಿದರು.  

ಬೆಳ್ಳೆ ಗ್ರಾಮದ ಕಟ್ಟಿಂಗೇರಿ ೧ನೇ ವಾರ್ಡಿನ ನೂರಾರು ಮಂದಿ ಗ್ರಾಮಸ್ಥರು ಸಭೆ ಸೇರಿ ನಮ್ಮ ಬೇಡಿಕೆ ಈಡೇರದೆ ಲೋಕಸಭೆ ಸೇರಿದಂತೆ ಮುಂಬರುವ ಯಾವುದೇ ಚುನಾವಣೆಗಳಲ್ಲಿ ಭಾಗವಹಿಸುವುದಿಲ್ಲ ಎಂಬುದಾಗಿ ಈ ಸಂದರ್ಭ ಘೋಷಿಸಿದರು. 

ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಿಂಗೇರಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕ್ಕೊಳಗಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ ,ಸೇತುವೆ,ದಾರಿದೀಪ,ಬಸ್ ವ್ಯವಸ್ಥೆ ಯಿಲ್ಲದೆ ಕಟ್ಟಿಂಗೇರಿ ಕುಗ್ರಾಮವಾಗಿದೆ. ಬೆಳ್ಳೆ ಗ್ರಾಮದಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ಗಳು ಗ್ರಾಮ ವಾಸ್ತವ್ಯ ನಡೆಸಿ, ಜನರ ಅಹವಾಲುಗಳನ್ನು ಸ್ವೀಕರಿದ್ದರೂ ಕೂಡಾ ಈ ತನಕ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ದೂರಿಕೊಂಡರು.      




 ಬೆಳ್ಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ ಮಾತನಾಡಿ,ಕಟ್ಟಿಂಗೇರಿ ವಾರ್ಡಿನಲ್ಲಿ  ಸುಮಾರು 1ಸಾವಿರ ಮಂದಿ ಅರ್ಹ ಮತದಾರರಿದ್ದಾರೆ. ಕಳೆದ ಚುನಾವಣೆ ಯಲ್ಲಿ ಏಳ್ನೂರ ಐವತ್ತಕ್ಕೂ ಅಧಿಕ ಮಂದಿ ಮತದಾನ ಮಾಡಿದ್ದಾರೆ. ಹೀಗಿದ್ದರೂ ಇಲ್ಲಿ ಯಾವುದೇ ಸೌಕರ್ಯಗಳಿಲ್ಲ. ಸಮರ್ಪಕ ರಸ್ತೆ, ಸೇತುವೆ ಗಳಿಲ್ಲದೆ 6ವರ್ಷಗಳಿಂದ ಕಟ್ಟಿಂಗೇರಿಗೆ ಬಸ್ ಬರುತ್ತಿಲ್ಲ.ಈ ಬಾರಿ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ಸ್ವ ಇಚ್ಛೆಯಿಂದ ಮುಂದಾಗಿದ್ದಾರೆ ಎಂದರು. ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಮಾತನಾಡಿ, ಕಟ್ಟಿಂಗೇರಿ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಪ್ರತೀ ಬಾರಿ ಮತದಾನ ಬಹಿಷ್ಕಾರಕ್ಕೆ ಮುಂದಾದರೂ, ಜನಪ್ರತಿನಿಧಿಗಳ ಆಶ್ವಾಸನೆ ಸೋತು ಬಹಿಷ್ಕಾರ ಹಿಂಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಒತ್ತಡ, ಆಮಿಷಗಳಿಗೆ ಗ್ರಾಮಸ್ಥರು ಜಗ್ಗದೆ  ಅಚಲ ನಿರ್ಧಾರ ವನ್ನು ಸಭೆಯಲ್ಲಿ ಕೈಗೊಂಡಿದ್ದಾರೆ ಎಂದರು. ಬೆಳ್ಳೆ ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿ, ಕಟ್ಟಿಂಗೇರಿಗೆ ರಸ್ತೆ ಕಾಮಗಾರಿ ಮುಗಿದು, ಬಸ್ ಸಂಚಾರ ಆರಂಭವಾದ ಮೇಲೆಯೇ ಮತದಾನ ಮಾಡುವುದೆಂದು ನಾವು ನಿರ್ಧರಿಸಿದ್ದೇವೆ. ಸ್ಥಳೀಯ ಶಾಸಕರು,  ಸಂಸದರು ಸೇರಿದಂತೆ ಎಲ್ಲರೂ ನಮ್ಮನ್ನು ಮರೆತಿದ್ದಾರೆ.  ಮತದಾನ ಬಹಿಷ್ಕಾರದ ಬಗ್ಗೆ ಜಿಲ್ಲಾ ಚುನಾವಣಾ ಧಿಕಾರಿ ಮಾತ್ರವಲ್ಲದೆ ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ ಎಂದರು.ಮುಂಬಯಿ ಉದ್ಯಮಿ ಮಹೇಶ್ ಹೆಗ್ಡೆ,ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಸಫಲಿಗ,ಸಮಾಜಸೇವಕ ಸಂತೋಷ್ ಶೆಟ್ಟಿ ಪಂಜಿಮಾರ್  ಉಪಸ್ಥಿತರಿದ್ದರು.

Post a Comment

0 Comments