ಮುಂಬೈ: ನಗರದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ ಬಳಿಕ ಉಂಟಾದ ಅಡ್ಡ ಪರಿಣಾಮಗಳಿಂದ ತಮ್ಮ ಪುತ್ರಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ದಿಲೀಪ್ ಲುನಾವತ್ ಎನ್ನುವವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್ಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ದೇಹಕ್ಕೆ ಯಾವುದೇ ತೊಂದರೆ ಅಥವಾ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ತಮ್ಮ ಪುತ್ರಿ ಸ್ನೇಹಲ್ ಲುನಾವತ್ ಅವರಿಗೆ ವೈದ್ಯರು ಭರವಸೆ ನೀಡಿದ್ದರು. ಇದನ್ನು ನಂಬಿ ವ್ಯಾಕ್ಸಿನ್ ಪಡೆದು ಸಾವನ್ನಪ್ಪಿದ್ದಾಳೆ. ಹೀಗಾಗಿ 1,000 ಕೋಟಿ ಪರಿಹಾರ ನೀಡಬೇಕು ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಶೋಧನೆ ಮಾಡಿದೆ. ಇದಕ್ಕೆ ಬಿಲ್ಗೇಟ್ಸ್ ಫೌಂಡೇಶನ್ ಆರ್ಥಿಕ ನೆರವು ನೀಡಿದೆ. ಈ ವ್ಯಾಕ್ಸಿನ್ ಪಡೆದು ಮಗಳು ಸಾವನ್ನಪ್ಪಿದ್ದಾಳೆ. ಎಇಎಫ್ಐ ಸಮಿತಿಯು ಕೋವಿಶೀಲ್ಡ್ನ ಅಡ್ಡಪರಿಣಾಮಗಳಿಂದ ಯುವತಿಯ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡಿದೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.
ಪ್ರಕರಣದಲ್ಲಿ ಕೇಂದ್ರ ಸರ್ಕಾರ, ಮಹಾರಾಷ್ಟ್ರ ರಾಜ್ಯ ಸರ್ಕಾರ, ಕೇಂದ್ರ ಆರೋಗ್ಯ ಇಲಾಖೆ, ಟಾಸ್ಕ್ ಫೋರ್ಸ್ ಸದಸ್ಯ ಡಾ.ರಣದೀಪ್ ಗುಲೇರಿಯಾ, ಡಿಜಿಸಿಐ ಹಾಗೂ ಬಿಲ್ಗೇಟ್ಸ್ ಅವರನ್ನು ಅರ್ಜಿದಾರ ದಿಲೀಪ್ ಲುನಾವತ್ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಅಲ್ಲದೇ ಲಸಿಕೆ ಅಡ್ಡ ಪರಿಣಾಮಗಳಿಂದಾಗುವ ಸಾವುಗಳ ಬಗ್ಗೆ ಸರಿಯಾದ ಡೇಟಾವನ್ನು ಸಂಗ್ರಹಿಸುವಲ್ಲಿ ಪಿತೂರಿ ಮಾಡಿರುವ ಗೂಗಲ್, ಯೂಟ್ಯೂಬ್, ಮೆಟಾ ಮುಂತಾದ ಸಾಮಾಜಿಕ ಮಾಧ್ಯಮ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಕೋರಿದರು.
0 Comments