ಉಡುಪಿ : ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ಸಮಯೋಚಿತ ರಾಜಕೀಯ ನಿವೃತ್ತಿಯ ಒಂದು ನಿರ್ಧಾರ ಉಡುಪಿ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣರಾಗಿದ್ದಾರೆ.
ರಾಜಕೀಯ ಪಕ್ಷಗಳು ಎಷ್ಟೇ ಇಲ್ಲ ಎಂದರೂ ಜಿಲ್ಲೆಯಲ್ಲಿ ಜಾತಿ ಆಧಾರಿತ ರಾಜಕೀಯವೇ ನಡೆಯುತ್ತದೆ. ಜಿಲ್ಲೆಯ ಬಹುಸಂಖ್ಯಾತ ಮತದಾರರಿರುವ ಬಿಲ್ಲವ, ಬಂಟ ಮತ್ತು ಮೊಗವೀರ ಸಮದಾಯಕ್ಕೆ ಒಂದಾದರೂ ಟಿಕೇಟ್ ನೀಡಲೇಬೇಕಾಗುತ್ತದೆ.
ಕಾರ್ಕಳದಲ್ಲಿ ಬಿಲ್ಲವ ಸಮುದಾಯದ ಸುನಿಲ್ ಕುಮಾರ್ ಅವರಿಗೆ ಬಹುತೇಕ ಟಿಕೇಟ್ ಪಕ್ಕ ಆಗಿದೆ. ಇದುವರೆಗಿನ ಲೆಕ್ಕಾಚಾರದಲ್ಲಿ ಲಾಲಾಜಿ ಅಥವಾ ಯಶಪಾಲ್ ಅವರು ಮೊಗವೀರ ಸಮುದಾಯವನ್ನು ಪ್ರತಿನಿಧಿಸಬಹುದು. ಆದರೇ ಬೈಂದೂರಿನ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಪುನಃ ಈ ಬಾರಿ ಟಿಕೇಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಹಾಗಿರುವಾಗ ಬಂಟ ಸಮುದಾಯದಲ್ಲಿ ಹಾಲಾಡಿ ಅವರಿಗೆ ಟಿಕೇಟ್ ಬಹುತೇಕ ಗ್ಯಾರಂಟಿ ಆಗಿತ್ತು. ಕೇಳಿದರೇ ಎಲ್ಲಾ ವರಿಷ್ಟರಿಗೆ ಬಿಟ್ಟದ್ದು ಎಂದು ಟಿಪಿಕಲ್ ಉತ್ತರ ನೀಡುತಿದ್ದರು, ಅದಕ್ಕೆ ಪೂರಕವಾಗಿ, ಪಕ್ಷದ, ಆರ್ ಎಸ್ ಎಸ್ ಕಾರ್ಯಕ್ರಮಗಳಿಗೇ ಹೋಗದ ಅವರು, ಇತ್ತೀಚೆಗೆ ಹೋಗಲಾರಂಭಿಸಿದ್ದರು. ಆದ್ದರಿಂದ ಅವರು ಮತ್ತೇ ಸ್ಪರ್ಧಿಸುವ ಆಸೆಯಲ್ಲಿದ್ದಾರೆ ಎಂದು ಲೆಕ್ಕ ಹಾಕಲಾಗುತ್ತಿತ್ತು.
ಆದರೇ ಇದೀಗ ಸಡನ್ ಆಗಿ ತಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ, ಇಷ್ಟೇ ಆಗಿದ್ದರೇ ಪರವಾಗಿರಲಿಲ್ಲ, ತನ್ನ ಬದಲಿಗೆ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಅವರಿಗೆ ಟಿಕೇಟ್ ಕೊಡಬೇಕು ಎಂದೂ ಬಲವಾದ ಹಕ್ಕೊತ್ತಾಯ ಮಂಡಿಸಿದ್ದಾರೆ.
ಇದು ಉಡುಪಿಯಲ್ಲಿ ರಘುಪತಿ ಭಟ್ಟರನ್ನು ಬೆಚ್ಚಿ ಬೀಳಿಸಿದೆ. ಹಾಗೇ ನೋಡಿದರೇ ಉಡುಪಿಯಲ್ಲಿ 5 - 6 ಪರ್ಸೆಂಟ್ ಗಿಂತಲೂ ಕಡಿಮೆ ಇರುವ ಬ್ರಾಹ್ಮಣ ಸಮುದಾಯಕ್ಕೆ ಟಿಕೇಟ್ ನೀಡಲೇಬೇಕಾದ ಅನಿವಾರ್ಯತೆ ಏನೂ ಬಿಜೆಪಿಗಿಲ್ಲ.
ಆದರೂ ಉಡುಪಿ ಮಠಗಳ ಪ್ರತಿನಿಧಿ ಎಂಬಂತೆ ಹಿಂದೆ ಡಾ.ವಿ.ಎಸ್.ಆಚಾರ್ಯರಿಗೆ, ನಂತರ ರಘುಪತಿ ಭಟ್ಟರಿಗೆ ಟಿಕೇಟ್ ನೀಡಲಾಗಿತ್ತು. ಅವರಿಗೆ ಟಿಕೇಟು ಕೊಡಿಸಲು ಹಿಂದಿನ ಪೇಜಾವರ ಶ್ರೀಗಳು ಸಾಕಷ್ಟು ಕೆಲಸ ಮಾಡಿದ್ದೂ ಗುಟ್ಟೆನಲ್ಲ, ಈಗ ಪೇಜಾವರ ಶ್ರೀಗಳೂ ಇಲ್ಲ.
ಕುಂದಾಪುರ ಕ್ಷೇತ್ರದ ಮಟ್ಟಿಗೆ ಹಾಲಾಡಿ ಅವರು ಬೆಟ್ಟು ಮಾಡಿ ತೋರಿಸಿದವರಿಗೆ ಟಿಕೇಟು ನೀಡುವುದು ಬಿಜೆಪಿಗೆ ಅನಿವಾರ್ಯ, ಕಾರಣ ಅಲ್ಲಿ ಹಾಲಾಡಿ ಅವರಿಗೆ ಬೇಸರವನ್ನುಂಟು ಮಾಡಿ, ಅವರ ಬೆಂಬಲ ಇಲ್ಲದೇ, ಬಿಜೆಪಿ ಗೆಲ್ಲುವುದು ಸಾಧ್ಯವಿಲ್ಲ, ಯಾರ ಸಮಜಾಯಿಷಿಯನ್ನು ಅವರು ಕೇಳಿದವರೂ ಅಲ್ಲ ಕೇಳುವವರೂ ಅಲ್ಲ.
ಆದ್ದರಿಂದ ಕಿರಣ್ ಕೊಡ್ಗಿ ಅವರಿಗೆ ಟಿಕೇಟ್ ನೀಡುವುದು ಬಿಜೆಪಿಗೆ ಅನಿವಾರ್ಯ. ಆಗ ಒಂದೇ ಜಿಲ್ಲೆಯಲ್ಲಿ ಇಬ್ಬರು ಬ್ರಾಹ್ಮಣರಿಗೆ ಟಿಕೇಟ್ ನೀಡುವುದಂತೂ ಸಾಧ್ಯವಿಲ್ಲ, ಸಹಜವಾಗಿಯೇ ಇದು ರಘುಪತಿ ಭಟ್ಟರಿಗೆ ಮೈಮೇಲೆ ಕುದಿವ ನೀರು ಸುರಿದಂತಾಗಿದೆ.
ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಬಳಿ ರಘುಪತಿ ಭಟ್ಟರ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇದ್ದಂತಿಲ್ಲ, ಆದ್ದರಿಂದ ಅವರಿಗೆ ಈ ಬಾರಿ ಟಿಕೇಟ್ ನೀಡುವ ಉಮೇದೂ ಹೈಕಮಾಂಡ್ ಗೂ ಇರಲಿಲ್ಲ !
ಇದು ಗೊತ್ತಾಗಿಯೇ ಭಟ್ಟರು ಇತ್ತೀಚೆಗೆ ತಮ್ಮ ಆಪ್ತರ ಮೂಲಕ, ಸಾರ್ವಜನಿಕರ ಹಣದಲ್ಲಿ ಯಾಗ, ಉತ್ಸವ, ಸಮ್ಮೇಳನ ಎಂದೆಲ್ಲಾ ಮಾಡಿ ತಮ್ಮ ಪರ ಹವಾವೊಂದನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದರು, ಇದನ್ನು ನೋಡಿದವರು ಭಟ್ಟರಿಗೆ ಟಿಕೇಟ್ ಗ್ಯಾರಂಟಿ ಎನ್ನುತ್ತಿದ್ದರು.
ಅವರಿಗೆ ಟಿಕೇಟ್ ನಿರಾಕರಿಸಲಿಕ್ಕೆ ಹೈಕಮಾಂಡ್ ಗೆ ಒಂದು ಗಟ್ಟಿ ಕಾರಣ ಬೇಕಾಗಿತ್ತು. ಅದನ್ನು ಹಾಲಾಡಿ ಅವರು ಅನಾಯಾಸವಾಗಿ ಒದಗಿಸಿಕೊಟ್ಟಿದ್ದಾರೆ.
0 Comments