Header Ads Widget

ಬೆಳ್ತಂಗಡಿ: ಮನೆಯಲ್ಲಿ ನಡೆಯಿತು ವಿಚಿತ್ರ ಘಟನೆಗಳು : ಬೆಂಕಿ ಹಿಡಿದು ಉರಿಯುವ ಬಟ್ಟೆ : ನೆಲಕ್ಕೆ ಬೀಳುತ್ತಿರುವ ಪಾತ್ರೆ ಬಟ್ಟಲು...!!

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ಎಂಬಲ್ಲಿ ಮನೆಯೊಂದರಲ್ಲಿ ಕಳೆದ ಮೂರು ತಿಂಗಳುಗಳಿಂದ ಸಂಜೆಯಾಗುತ್ತಿದ್ದಂತೆ ವಿಚಿತ್ರ ಘಟನೆಗಳು ನಡೆಯುತ್ತಿದ್ದು ಮನೆ ಮಂದಿಯೆಲ್ಲ ಆತಂಕಕ್ಕೆ ಒಳಗಾಗಿದ್ದಾರೆ. ಇದು ಪ್ರೇತ ಭಾದೆ ಎಂದು ಮನೆಯವರು ಹೇಳುತ್ತಿದ್ದರೂ, ಘಟನೆಯ ಸತ್ಯಾ ಸತ್ಯತೆ ನಿಗೂಢವಾಗಿದೆ.

ಕೊಲ್ಪೆದಬೈಲ್‌ ಉಮೇಶ್‌ ಶೆಟ್ಟಿ ಅವರ ಮನೆಯಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನಾವಳಿಗಳು ನಡೆಯುತ್ತಿದ್ದು, ಇದರಿಂದ ಆತಂಕ ಗೊಂಡಿರುವ ಮನೆ ಮಂದಿ ಗುರುವಾರ ಮನೆಯನ್ನೇ ತೊರೆದು ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಉಮೇಶ್‌ ಶೆಟ್ಟಿ ತಿಳಿಸಿದ್ದಾರೆ.

ಇದನ್ನು ತಿಳಿದು ಪರಿಸರದ ಹಲವಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಮನೆ ಎದುರು ಜನ ಸೇರಿದಾಗ ಇಂತಹ ಘಟನೆಗಳು ನಡೆದಿಲ್ಲ ಎನ್ನುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರ ಜತೆ ಉಮೇಶ್‌ ಶೆಟ್ಟಿ ಇಲ್ಲಿ ವಾಸವಾಗಿದ್ದಾರೆ. ಮನೆ ಮಂದಿಗೆಲ್ಲ ವಿಚಿತ್ರ ಅನುಭವಗಳಾಗುತ್ತಿವೆ. ಯಾರೋ ಓಡಾಡಿಕೊಂಡ ಹಾಗೆ ಆಗುತ್ತಿದೆ. ಮನೆಯಲ್ಲಿದ್ದ ಚಿನ್ನ ಕೂಡ ಇತ್ತೀಚೆಗೆ ನಾಪತ್ತೆಯಾಗಿದೆ ಎಂದು ಸೆಂಟ್ರಿಂಗ್‌ ಕೆಲಸ ಮಾಡಿ ಜೀವನ ಸಾಗಿರುತ್ತಿರುವ ಉಮೇಶ್‌ ತಿಳಿಸಿದ್ದಾರೆ. ಇದು ಪ್ರೇತ ಮತ್ತು ದೈವದ ಸಮಸ್ಯೆಯಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿದೆ.

ಮನೆಯಲ್ಲಿ ಕಾದು ಕುಳಿತು ಹೊರಗಿನವರು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ವಿಷಯ ಗೊತ್ತಾಗಿಲ್ಲ. ಈ ನಡುವೆ ಮಕ್ಕಳು ಕೆಲವೊಂದು ವೀಡಿಯೋ ಮಾಡಿದ್ದು, ಅದು ಅಸ್ಪಷ್ಟತೆಯಿಂದ ಕೂಡಿದೆ. ಪರಿಸರದಲ್ಲಿ ಇತರ ಕೆಲವು ಮನೆಗಳಿದ್ದು, ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಉಮೇಶ್‌ ಅವರು ಸ್ಕೂಟಿ ಹೊಂದಿದ್ದು, ಕೆಲವು ದಿನಗಳಿಂದ ಅದರಲ್ಲಿ ಪ್ರಸಾದ ಕಂಡುಬರುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತೀದಿನ ಹೊರಗೆ ಹೋಗಿ ಬಂದಾಗ ಅದರಲ್ಲಿ ಪ್ರಸಾದ ಕಂಡುಬರುತ್ತಿದೆ. ಇದಕ್ಕಾಗಿ ಒಮ್ಮೆ ದಿನವಿಡೀ ಕಾದು ಕುಳಿತಿದ್ದೆ. ಅಂದು ಪ್ರಸಾದ ಕಾಣಲಿಲ್ಲ. ಈ ಬಗ್ಗೆ ಜೋತಿಷಿಗಳಲ್ಲಿ ಪ್ರಶ್ನೆ ಚಿಂತನೆ ನಡೆಸಿದಾಗ ಪ್ರೇತ ಮತ್ತು ದೈವದ ಸಮಸ್ಯೆ ಎನ್ನುತ್ತಿದ್ದಾರೆ.

ಇದಕ್ಕೆಲ್ಲ ಪರಿಹಾರ ಮಾಡಿಸುವ ಶಕ್ತಿ ಬಡವನಾದ ನನ್ನಲ್ಲಿ ಇಲ್ಲ ಎಂದು ಉಮೇಶ್‌ ಹೇಳಿದ್ದಾರೆ. ರವಿವಾರ ಇಲ್ಲಿಗೆ ಹುಲಿಕಲ್‌ ನಟರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಯಲಾಗಿದೆ.

Post a Comment

0 Comments